ಮೈಸೂರು,ಆಗಸ್ಟ್,24,2026 (www.justkannada.i): ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದ್ದು ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವೂ ಕೂಡ ತಮಿಳುನಾಡು ಸರ್ಕಾರದ ಹಿತ ಕಾಯಲು ಮುಂದಾಗಿದೆ.
ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಅಗತ್ಯಕಿಂತಲೂ ಹೆಚ್ಚು ನೀರು ಹರಿಸುತ್ತಿದ್ದು ತುಂಬಿದ್ದ ಡ್ಯಾಂ ಅನ್ನು ಸಂಪೂರ್ಣ ಖಾಲಿ ಮಾಡುತ್ತಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಪ್ರಕಾರ ತಮಿಳುನಾಡಿಗೆ ಪ್ರತಿನಿತ್ಯ ಹರಿಸಬೇಕಾಗಿದ್ದು 12 ಸಾವಿರ ಕ್ಯೂಸೆಕ್ ಮಾತ್ರ. ಆದರೆ ಹರಿಯುತ್ತಿರುವುದು 13,500 ಕ್ಯೂಸೆಕ್ ನೀರು. ಕಬಿನಿ ಡ್ಯಾಂ ನಿಂದ ನಿತ್ಯ ಒಂದು ಟಿಎಂಸಿ ನೀರು ಬಿಡುಗಡೆ ಮಾಡುತ್ತಿದ್ದು ಅಧಿಕಾರಿಗಳು ಬರೋಬ್ಬರಿ 12 ಅಡಿ ನೀರು ಹರಿಬಿಟ್ಟಿದ್ದಾರೆ. ಈ ಮೂಲಕ ಬಾಗಿನ ಅರ್ಪಣೆಗೂ ಮುನ್ನವೇ ಕಬಿನಿ ಜಲಾಶಯ ಬರಿದಾಗುತ್ತಿದೆ.
ಇದರಿಂದಾಗಿ ಭವಿಷ್ಯದಲ್ಲಿ ಒಂದೂವರೆ ಕೋಟಿ ಜನರ ಕುಡಿಯುವ ನೀರಿಗೆ ತಾತ್ಪರ ಉಂಟಾಗಲಿದೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಐದು ಜಿಲ್ಲೆಗಳಿಗೆ ಜಲ ಸಂಕಟ ಎದುರಾಗಿಲಿದೆ.
ಕಬಿನಿ ಜಲಾಶಯ ನೀರಿನ ಮಟ್ಟ ಹೀಗಿದೆ..
ಗರಿಷ್ಠ ಮಟ್ಟ: 84 ಅಡಿಗಳು
ಇಂದಿನ ಮಟ್ಟ: 72.30 ಅಡಿ
ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಸಾಮರ್ಥ್ಯ: 12.85 ಟಿಎಂಸಿ
ಒಳಹರಿವು:8260 ಕ್ಯೂಸೆಕ್
ಹೊರಹರಿವು: 13,385 ಕ್ಯೂಸೆಕ್
ನೀರೆಲ್ಲ ತಮಿಳುನಾಡಿಗೆ ಬಿಟ್ಟ ಮೇಲೆ ಪ್ರತಿಭಟನೆಗೆ ಕರೆ
ಊರೆಲ್ಲ ಖಾಲಿಯಾದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಎಂಬ ಗಾದೆ ಮಾತಿನಂತೆ ಸರ್ಕಾರ ನೀರೆಲ್ಲ ತಮಿಳುನಾಡಿಗೆ ಬಿಟ್ಟ ಮೇಲೆ ರೈತ ಮುಖಂಡರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಕಬಿನಿ ಹಿತರಕ್ಷಣಾ ವೇದಿಕೆಯಿಂದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ನೆನ್ನೆ ಮೊನ್ನೆ ರೈತರು ಪ್ರತಿಭಟನೆ ನಡೆಸಿದ್ದರೂ ಸಹ ಅಧಿಕಾರಿಗಳು, ಸರ್ಕಾರ ಕ್ಯಾರೆ ಎಂದಿಲ್ಲ. ತಮಿಳುನಾಡಿಗೆ ನೀರು ಬಿಡಿ. ನಮ್ಮ ಬೆಳೆಗಳಿಗೂ ನೀರು ಬಿಡಿ ಎಂದು ರೈತರು ಮನವಿ ಮಾಡಿದರೂ ಸಹ ಸರ್ಕಾರ ಅಧಿಕಾರಿಗಳು ರೈತರ ಬೆಳೆಗಳಿಗೆ ನೀರು ಹರಿಸದೇ ನಿತ್ಯ ತಮಿಳುನಾಡಿಗೆ 13,500 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿದೆ. ಕೇವಲ 1,500 ಕ್ಯೂಸೆಕ್ಸ್ ರೈತರ ಬೆಳೆಗೆ ಹರಿಸಲು ಮೀನಾಮೇಷ ಎಣಿಸುತ್ತಿದೆ. ರೈತರು ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಜಾಣ ನಡೆ ತೋರಿದ್ದಾರೆ.
Key words: Water, flows, TamilNadu, Kabini Dam, empty, Farmers, protest
The post ತಮಿಳುನಾಡಿಗೆ ಹರಿದ ನೀರು: ಕಬಿನಿ ಡ್ಯಾಂ ಖಾಲಿ : ಇಂದು ರೈತರಿಂದ ಹೋರಾಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





