ಮೈಸೂರು,ಆಗಸ್ಟ್,24,2026 (www.justkannada.in): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಇಂದು ಮೈಸೂರಿನಲ್ಲಿ ರೈತಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಿಡಬ್ಲ್ಯುಎಂಎ, ಸಿಡಬ್ಲ್ಯುಆರ್ ಸಿ ವಿರುದ್ಧ ರೈತರು ಕಿಡಿ ಕಾರಿದರು. ಹಸಿರು ಟವಲ್ ತಿರುಗಿಸಿ ನೀರು ನಿಲ್ಲಿಸಿ ಅಂತ ಕೂಗಿ ಬಾಯಿ ಬಡಿದುಕೊಂಡು ರೈತರು ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಬಡಗಲಪುರ ನಾಗೇಂದ್ರ, ಮಂಡ್ಯದ ಹೋರಾಟಗಾರರಿಗೆ ಮನ್ನಣೆ ನೀಡುತ್ತಾರೆ. ಮೈಸೂರು ಭಾಗದ ರೈತರಿಗೆ ಯಾಕೆ ಸ್ಪಂದಿಸಲ್ಲ. ನಾವು ಚಲುವರಾಯಸ್ವಾಮಿ ಅವರನ್ನ ಮನವಿ ಮಾಡಿದ್ದೇವೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಜೊತೆ ಮನವಿ ಮಾಡಿದ್ದೆವು. ಚಲುವರಾಯಸ್ವಾಮಿ ಅವರು ಕರೆ ಮಾಡಿ ಮನವಿ ಮಾಡಿದ್ದಾರೆ. ಮುತ್ತಿಗೆಯನ್ನ ನಿಲ್ಲಿಸಿ ಅಂತ ಹೇಳಿದರು. ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ. ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಿರಿ. ಡ್ಯಾಂ ನಿರ್ಮಾಣಕ್ಕಾಗಿ ಆದಿವಾಸಿಗಳು ನಿವಾಸ ಕಳೆದುಕೊಂಡಿದ್ದಾರೆ. 42 ಗ್ರಾಮಗಳು ಮುಳುಗಡೆ ಆಗಿವೆ. ಡ್ಯಾಂಗಾಗಿ ಮನೆ,ಮಠ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಬಿನಿ ಡ್ಯಾಂ ಇರುವುದು ತಮಿಳುನಾಡು ವಿವಾದಕ್ಕೆ ಮಾತ್ರ ಇಲ್ಲವಾದರೆ ಬೆಂಗಳೂರಿಗರಿಗೆ ಕುಡಿಯೋದಕ್ಕೆ ಮಾತ್ರ ಬೇಕು. ಯಾವುದೇ ರಾಜಕಾರಣಿಗಳು ಇದರ ಬಗ್ಗೆ ಗಮನ ಹರಿಸಲ್ಲ. ಮಾಜಿ ಪ್ರಧಾನಿ ದೇವೇಗೌಡರು, ಬಿಎಸ್ ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಡಿಕೆ ಶಿವಕುಮಾರ್ ಎಲ್ಲರೂ ಅಧಿಕಾರಕ್ಕೆ ಮುಗಿಬಿದ್ದರು. ರೈತರ ಹಿತವನ್ನ ಯಾರೂ ಕಾಪಾಡಲಿಲ್ಲ. ಕಬಿನಿ ಹಿತ ಕಾಯದಿದ್ದರೆ ಕುರ್ಚಿ ಕಸಿದುಕೊಳ್ಳುತ್ತೇವೆ. ಸಿಎಂ ಡಿಕೆ ಶಿವಕುಮಾರ್ ಅವರ ಕುರ್ಚಿ ಕಿತ್ತುಕೊಳ್ಳುತ್ತೇವೆ ಎಂದು ಹರಿಹಾಯ್ದರು.
ಕಬಿನಿ ಡ್ಯಾಂ ಬಾಗಿಲು ಬಂದ್ ಮಾಡುತ್ತೇವೆ. ತಕ್ಷಣ ತಮಿಳುನಾಡಿಗೆ ನೀರು ನಿಲ್ಲಿಸಿ. ಕಬಿನಿಯನ್ನ ವಶಕ್ಕೆ ಪಡೆದುಕೊಳ್ಳುತ್ತೇವೆ. ಕಬಿನಿ ಡ್ಯಾಂ ನಾವೇ ಮುಚ್ಚುತ್ತೇವೆ ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
Key words: water, Tamil Nadu, Kabini, Protest, kabini, Badagalapura Nagendra
The post ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ: ಕಬಿನಿ ಹಿತ ಕಾಯದಿದ್ದರೆ ಕುರ್ಚಿ ಕಸಿದುಕೊಳ್ತೀವಿ- ಬಡಗಲಪುರ ನಾಗೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





