ರಾಮನಗರ,ಮೇ,5,2026 (www.justkannada.in): ಬೆಂಗಳೂರು–ಮೈಸೂರು ನಡುವಿನ ಒಡೆಯರ್ ಎಕ್ಸ್ಪ್ರೆಸ್ ರೈಲಿಗೆ ರಾಮನಗರ ರೈಲು ನಿಲ್ದಾಣದಲ್ಲಿ ಇಂದು ಅಧಿಕೃತವಾಗಿ ಹೆಚ್ಚುವರಿ ನಿಲುಗಡೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಪದ್ಮಶ್ರೀ ಡಾ. ಸಿ. ಎನ್. ಮಂಜುನಾಥ್ ಅವರು ಹಸಿರು ನಿಶಾನೆ ನೀಡಿದರು.
ಈ ನಿಲುಗಡೆಯು ಜಿಲ್ಲೆಯ ಜನತೆಗೆ ದೀರ್ಘಕಾಲದಿಂದಲೂ ಇರುವ ಪ್ರಮುಖ ಬೇಡಿಕೆಯಾಗಿದ್ದು, ಇದೀಗ ಅದು ಸಾಕಾರಗೊಂಡಿರುವುದು ಜನರಲ್ಲಿ ಅಪಾರ ಸಂತಸ ಮೂಡಿಸಿದೆ. ಪ್ರತಿದಿನ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರ ಉದ್ದೇಶಕ್ಕಾಗಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಇದು ಮಹತ್ತರ ಅನುಕೂಲವಾಗಲಿದೆ. ಜೊತೆಗೆ, ಮೈಸೂರು–ಬೆಂಗಳೂರು ನಡುವೆ ವೇಗವಾದ ಸಂಪರ್ಕವನ್ನು ಇನ್ನಷ್ಟು ಸುಲಭಗೊಳಿಸುವ ಮೂಲಕ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಸಂಸದ ಡಾ.ಸಿಎನ್ ಮಂಜುನಾಥ್ ಹೇಳಿದರು.
ಈ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕ ಇಕ್ಬಾಲ್ ಹುಸೇನ್, ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
ಈ ಹೆಜ್ಜೆಯ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ ಮಹತ್ವದ ಮುನ್ನಡೆ ಸಾಧನೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳು ದೊರೆಯುವ ನಿರೀಕ್ಷೆಯನ್ನು ಜನತೆ ವ್ಯಕ್ತಪಡಿಸಿದ್ದಾರೆ.
Key words: Wodeyar Express, train, stop, Ramanagar, MP, Dr. C. N. Manjunath.
The post ಒಡೆಯರ್ ಎಕ್ಸ್ಪ್ರೆಸ್ ರೈಲು ನಿಲುಗಡೆ : ಜನರ ದಶಕಗಳ ಕನಸು ನನಸು- ಸಂಸದ ಡಾ ಸಿ ಎನ್ ಮಂಜುನಾಥ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





