ಮೈಸೂರು, ಜೂನ್,2,2026 (www.justkannada.in): ಜಯದೇವ ಹೃದ್ರೋಗ ಸಂಸ್ಥೆಯಿಂದ ಚಾಮರಾಜನಗರ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಚಾಮರಾಜನಗರದಲ್ಲಿ ವಾರಕ್ಕೊಮ್ಮೆ ಸಾರ್ವಜನಿಕರಿಗೆ ಹೃದಯ ತಪಾಸಣೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ. ಬಿ. ದಿನೇಶ್ ಅವರು, ಗಡಿನಾಡು ಚಾಮರಾಜನಗರದಲ್ಲಿ ಸಣ್ಣ ಹೃದ್ರೋಗ ಘಟಕವನ್ನು ಪ್ರಾರಂಭ ಮಾಡಿ ಪ್ರತಿ ಸೋಮವಾರ ಅಥವಾ ಬುಧವಾರ ಹೃದಯ ಸಮಸ್ಯೆ ಇರುವವರಿಗೆ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆತಂದು ಚಿಕಿತ್ಸೆ ನೀಡಲಾಗುವುದು ಎಂದರು.
ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಹೃದಯಾಘಾತದ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ಉತ್ತರ ಭಾರತದಲ್ಲಿ ಬಿಸಿಲಿನ ದಗೆಗೆ ಶರೀರದಲ್ಲಿ ನೀರಿನ ಕೊರತೆ ಉಂಟಾಗಿ ಬೇರೆ ಬೇರೆ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ಹೃದಯ ರೋಗಿಗಳು ಪ್ರತಿ 3 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಕರು ಮದ್ಯಪಾನ, ಧೂಮಪಾನ, ಮಾದಕವಸ್ತುಗಳ ಸೇವನೆಯನ್ನು ತ್ಯಜಿಸಿ ಉತ್ತಮವಾದ ಆರೋಗ್ಯಶೈಲಿಯನ್ನು ಅಳವಡಿಸಿಕೊಳ್ಳಬೇಕು. ವ್ಯಾಯಾಮ, ವಾಕಿಂಗ್ ಮಾಡಬೇಕು. ಮನೆ ಆಹಾರ, ಸೊಪ್ಪು, ಕಾಳು, ತರಕಾರಿಗಳನ್ನು ಹೆಚ್ಚಾಗಿ ಉಪಯೋಗಿಸಬೇಕು. ಬೇಕರಿ ತಿಂಡಿಗಳನ್ನು ತಿನ್ನಬಾರದು. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮವಾದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ಸಲಹೆ ನೀಡಿದರು.
ಬೆಂಗಳೂರಿನ ಗೋವಿಂದರಾಜನಗರ, ಚರಕ ಆಸ್ಪತ್ರೆಗಳಲ್ಲಿಯೂ 3 ತಿಂಗಳಲ್ಲಿ ಜಯದೇವ ಹೃದ್ರೋಗ ಘಟಕ ಪ್ರಾರಂಭಿಸಲಾಗುತ್ತಿದೆ. ಮೈಸೂರಿನಲ್ಲಿ 200 ಹಾಸಿಗೆ ಹೆಚ್ಚುವರಿ ಕಟ್ಟಡಕ್ಕೆ 1 ತಿಂಗಳಲ್ಲಿ ಶಂಕುಸ್ಥಾಪನೆ ಮಾಡುತ್ತೇವೆ. ಸೆಪ್ಟಂಬರ್ ನಲ್ಲಿ ಹುಬ್ಬಳ್ಳಿಯಲ್ಲಿ 437 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಸಿದ್ಧವಾಗುತ್ತಿದೆ ಎಂದರು.
Key words: weekly, heart, check-ups, Jayadeva, Chamarajanagar, Dr. B. Dinesh
The post ಚಾಮರಾಜನಗರದಲ್ಲಿ ಜಯದೇವದಿಂದ ವಾರಕ್ಕೊಮ್ಮೆ ಹೃದಯ ತಪಾಸಣೆಗೆ ಚಿಂತನೆ -ಡಾ. ಬಿ. ದಿನೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





