ಬೆಂಗಳೂರು,ಆಗಸ್ಟ್,28,2026 (www.justkannada.in): ಯಾವುದೋ ಒಂದು ಪ್ರತಿಷ್ಠಿತ ಕಂಪನಿಯ ಉದ್ಘಾಟನೆಯೋ, ಮತ್ತೊಂದು ಕಂಪನಿಯೊಂದಿಗೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಒಡಂಬಡಿಕೆಯೋ ನಡೆಯುತ್ತಿದೆ ಎಂದರೆ ಕೈಗಾರಿಕಾ ಸಚಿವರಿಗೆ ಸಹಜವಾಗಿಯೇ ಖುಷಿಯಾಗುತ್ತದೆ. ಇದರಲ್ಲಿ ಎರಡು ಮಾತಿಲ್ಲ, ನಿಜ. ಆದರೆ, ದೇವನಹಳ್ಳಿ ತಾಲ್ಲೂಕಿನ ಕುಂದಾಣದಲ್ಲಿ ಮೊನ್ನೆ ನಡೆದ ಡಿ.ಎನ್.ಸೊಲ್ಯೂಷನ್ಸ್ ಕಂಪನಿಯ ತಯಾರಿಕಾ ಸ್ಥಾವರ ಮತ್ತು ಆರ್ & ಡಿ ಘಟಕಗಳ ಉತ್ಪಾದನೆಯಲ್ಲಿ ಎಂ ಬಿ ಪಾಟೀಲರು ರೋಮಾಂಚನಗೊಳ್ಳಲು ಇದ್ದ ಕಾರಣವೇ ಬೇರೆ ಎಂದರೆ ನೀವು ನಂಬಬೇಕು.
ಡಿ.ಎನ್.ಸೊಲ್ಯೂಷನ್ಸ್ ಅಂದರೆ ಇದು ದಕ್ಷಿಣ ಕೊರಿಯಾದ ಒಂದು ಅಗ್ರಮಾನ್ಯ ಕಂಪನಿ; ಮಶೀನ್ ಟೂಲ್ಸ್ ಕ್ಷೇತ್ರದಲ್ಲಿ ಇದರದು ದೊಡ್ಡ ಹೆಸರು. ಈ ಕಂಪನಿ ನಮ್ಮಲ್ಲೀಗ 600 ಕೋಟಿ ರೂಪಾಯಿ ಸುರಿದು ತನ್ನ ಎರಡೂ ಸ್ಥಾವರಗಳನ್ನು ಹೊಸದಾಗಿ ನಿರ್ಮಿಸಿದೆ. ಕಂಪನಿಯವರು ಸಹಜವಾಗಿಯೇ ಸಚಿವರನ್ನು ಉದ್ಘಾಟನೆಗೆ ಆಮಂತ್ರಿಸಿದ್ದರು.
ಆದರೆ, ಕಂಪನಿಯ ಕ್ಯಾಂಪಸ್ಸಿನಲ್ಲಿ ಎಂ ಬಿ ಪಾಟೀಲರಿಗೆ ಎದುರಾದ ದೃಶ್ಯವೇ ಬೇರೆ. ಅಂದರೆ, ಅವರು ಅಲ್ಲಿಗೆ ಹೋಗುತ್ತಿದ್ದಂತೆಯೇ, ಸಮವಸ್ತ್ರ ತೊಟ್ಟುಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತಿದ್ದ 30-40 ಉದ್ಯೋಗಿಗಳ ಗುಂಪು ಇವರಿಗೆ ಮುತ್ತಿಗೆ ಹಾಕಿತು; ಆದರೆ ಅದು ಪ್ರತಿಭಟನೆಯ ಮುತ್ತಿಗೆಯಲ್ಲ, ಬದಲಿಗೆ ಅಂತರಾಳದ ಅಭಿಮಾನದ ಮುತ್ತಿಗೆ!
ಇವರೆಲ್ಲ ಯಾರೆಂದರೆ, ಮೂಲತಃ ವಿಜಯಪುರ ಜಿಲ್ಲೆಯ ಬೇರೆ ಬೇರೆ ಭಾಗಗಳಿಗೆ ಸೇರಿದವರು. ಇದಕ್ಕಿಂತ ಹೆಚ್ಚಾಗಿ ಎಂ ಬಿ ಪಾಟೀಲ ಅವರ ಪ್ರತಿಷ್ಠಿತ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಬೇರೆ ಬೇರೆ ಕಾಲೇಜುಗಳಲ್ಲಿ ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಇತ್ಯಾದಿ ಕೋರ್ಸುಗಳನ್ನು ಓದಿರುವವರು. ಸಚಿವರ ಸಲಹೆ ಮೇರೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲೇ ಇವರೆಲ್ಲ ಆಯ್ಕೆಯಾಗಿದ್ದಾರೆ. ಡಿ.ಎನ್.ಸೊಲ್ಯೂಷನ್ಸ್ ಕಂಪನಿಯಲ್ಲಿ ಇವರೆಲ್ಲ ಮೆರಿಟ್ ಮೇಲೆ ಉದ್ಯೋಗಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದನ್ನೆಲ್ಲ ತಿಳಿದು ಸಚಿವರು ಪುಳಕಿತರಾದರು! ಇದಕ್ಕೆ ತಕ್ಕಂತೆ ಆ ಗುಂಪಿನಲ್ಲಿದ್ದವರಿಗೂ, `ಆಹಾ….. ಇವರು ನಮ್ಮೂರಿನ ಸಚಿವರು….’ ಎನ್ನುವ ಅಭಿಮಾನ ತುಂಬಿ ತುಳುಕುತ್ತಿತ್ತು.
ಈ ಗುಂಪಿನ ಬಳಿಗೆ ಯಾವುದೇ ಹಮ್ಮುಬಿಮ್ಮಿಲ್ಲದೆ ಹೋದ ಸಚಿವರು, ಅವರೊಂದಿಗೆ ಕುಶಲೋಪರಿ ನಡೆಸಿದರು; ಕೈ ಕುಲುಕಿದರು; ಯಾವುದೇ ಶಿಷ್ಟಾಚಾರವಿಲ್ಲದೆ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದರು; `ನೀವೆಲ್ಲರೂ ನಮ್ಮ ವಿಜಯಪುರದವರು ಅಂತ ಕೇಳಿ ತುಂಬಾ ಸಂತೋಷವಾಯ್ತು, ನೀವು ಕಂಪನಿಗೆ ಒಳ್ಳೆಯ ಹೆಸರು ತರಬೇಕು; ನೀವೂ ಸಾಧನೆ ಮಾಡಬೇಕು, ನಮ್ಮ ಹುಡುಗರು ಹಾರ್ಡ್ ವರ್ಕ್ಸ್ ಅಂತ ಹೇಳಿನಿ…ಜೋಪಾನ.. ಊರಿನ ಹುಡುಗರಿಗೂ ಇಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿ’ ಎಂದರು.
ಇದನ್ನು ಕಂಡು ಕಂಪನಿಯ ಅಧಿಕಾರಿಗಳು ಮತ್ತು ಉಳಿದ ಸಿಬ್ಬಂದಿ ವರ್ಗ ಮೂಕವಿಸ್ಮಿತವಾಯಿತು. ಹೀಗೆ ಕಾರ್ಪೊರೇಟ್ ಪ್ರಪಂಚವು ಅಂತರಂಗದ ಆನಂದದ ಹೊನಲಿಗೆ ಸಾಕ್ಷಿಯಾಯಿತು. `ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎನ್ನುವ ಮಾತಿನ ಮೂರ್ತರೂಪ ಅಲ್ಲಿ ಅರಳಿತ್ತು!
Key words: DN Solutions, inauguration, Minister, M.B. Patil, met , Vijayapura employees
The post ಡಿ.ಎನ್.ಸೊಲ್ಯೂಷನ್ಸ್ ಉದ್ಘಾಟನೆ: ವಿಜಯಪುರದ ನೌಕರರಿಂದ ಸಚಿವ ಎಂ.ಬಿ ಪಾಟೀಲ್ ಭೇಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





