ಮೈಸೂರು,ಮಾರ್ಚ್.26,2026: ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ ಹಾಗೂ ಸೇಡಿನ ಮನೋಭಾವ ಒಳಗೊಂಡ ನೀತಿಯಾಗಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದೆ. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಇಂದು ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಕೆ.ದೀಪಕ್ ನೇತೃತ್ವದಲ್ಲಿ ನಡೆದ ಪತ್ರಿಕಾ ಸಂಪಾದಕರ ಸಭೆಯಲ್ಲಿ ರಾಜ್ಯ ಸರಕಾರವು ʻಕರ್ನಾಟಕ ಜಾಹೀರಾತು ನೀತಿʼಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸಂಕಷ್ಟದಲ್ಲಿರುವ ಪತ್ರಿಕೆಗಳನ್ನು ಮೇಲೆತ್ತುವ ಬದಲು ಕುತ್ತಿಗೆ ಹಿಸುಕಿ ಕೊಲ್ಲಲು ಸಂಚು ರೂಪಿಸಿದೆ ಎಂಬ ಅನಿಸಿಕೆ ಸಭೆಯಲ್ಲಿ ಪತ್ರಿಕಾ ಸಂಪಾದಕರು ಕಳವಳ ವ್ಯಕ್ತಪಡಿಸಿದರು.
ಸಾಮಾನ್ಯ ವರ್ಗದ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಲು 2 ವರ್ಷದಿಂದ 3 ವರ್ಷಕ್ಕೆ ಪ್ರಕಟಣಾ ಅವಧಿಯನ್ನು ವಿಸ್ತರಿಸಿರುವುದು ಹಾಗೂ ಪರಿಶಿಷ್ಟ ಜಾತಿ, ವರ್ಗ, ವಿಶೇಷ ಸ್ಥಾನಮಾನ ಹೊಂದಿರುವ ಜಿಲ್ಲೆಗಳ ಪತ್ರಿಕೆಗಳು ಹಾಗೂ ಪ್ರಾದೇಶಿಕ ಭಾಷಾ ಪತ್ರಿಕೆಗಳಿಗೆ ಇದ್ದ 1 ವರ್ಷದ ಪ್ರಸಾರಣ ಅವಧಿಯನ್ನು 2 ವರ್ಷಕ್ಕೆ ವಿಸ್ತರಿಸಿರುವುದು ಹೊಸ ಪತ್ರಿಕೆಗಳ ಆರಂಭಕ್ಕೆ ಕಡಿವಾಣ ಹಾಕುವ ಹುನ್ನಾರವಾಗಿದೆ.
ಸದ್ಯ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾನ್ಯತೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪರಿಶೀಲನಾ ಸಮಿತಿಯಿಂದ ಪುನರ್ ಪರಾಮರ್ಶಿಸುವುದು, ಪ್ರಾದೇಶಿಕ ಪತ್ರಿಕೆಗಳು ಸ್ವಂತ ಕಛೇರಿ ಮತ್ತು ಮುದ್ರಣಾ ಘಟಕ ಹೊಂದಿರಬೇಕು ಹಾಗೂ ಕನಿಷ್ಠ 15 ಜನ ಖಾಯಂ ನೌಕರರರನ್ನು ಹೊಂದಿರಬೇಕು ಹಾಗೂ ಕನಿಷ್ಠ 6 ಜಿಲ್ಲೆಗಳಲ್ಲಿ 25,000 ಪ್ರತಿಗಳ ಪ್ರಸಾರ ಸಂಖ್ಯೆಯನ್ನು ಹೊಂದಿರಬೇಕು ಎಂದು ಷರತ್ತು ಹಾಕಲಾಗಿದೆ. ಪ್ರಾದೇಶಿಕ ಪತ್ರಿಕೆ ನಡೆಸುತ್ತಿರುವ ಎಲ್ಲರೂ ಪ್ರತ್ಯೇಕ ಮುದ್ರಣ ಘಟಕ ಸ್ಥಾಪಿಸಲು ಸಾಧ್ಯವೆ ? ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಪತ್ರಿಕೆ ಟೈಟಲ್ ವರ್ಗಾವಣೆ ರದ್ದು: ಪತ್ರಿಕೆಯ ಟೈಟಲ್ ವರ್ಗಾವಣೆಯನ್ನು ಕೇವಲ ಕುಟುಂಬಕ್ಕೆ ಸೀಮಿತಗೊಳಿಸುವುದು ಒಂದು ಪತ್ರಿಕೆಯ ಪರಂಪರೆ ಮುಂದುವರೆಕೆಗೆ ಧಕ್ಕೆಯಾಗಲಿದೆ. ಸಂಪಾದಕ ಸತ್ತರೂ ಪತ್ರಿಕೆಗಳು ಸಾಯಬಾರದು. ಪತ್ರಿಕೆಗಳ ಟೈಟಲ್ ವರ್ಗಾವಣೆ ಮಾಡಿದರೆ ಮಾನ್ಯತಾ ಪಟ್ಟಿಯಿಂದ ಕೈಬಿಡುವ ಕ್ರಮವೂ ಸಹ ಪತ್ರಿಕೆ ಮಾಲೀಕನ ಹಕ್ಕುಗಳನ್ನು ಕಸಿದುಕೊಳ್ಳುವಂತ್ತಾಗಲಿದೆ. ಹಾಗೂ ಪತ್ರಿಕೆಗಳು ದೀರ್ಘಕಾಲ ಮುದ್ರಣಗೊಳ್ಳಲು ತೊಡಕಾಗಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಜಾಹೀರಾತು ದರ ಪರಿಷ್ಕರಣೆ ವಿಷಯದಲ್ಲಿ ಕರ್ನಾಟಕ ಜಾಹೀರಾತು ನೀತಿ-2013 ಅನ್ವಯ ಶೇ. 12ರಷ್ಟು ಜಾಹಿರಾತು ದರವನ್ನು 2 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿತ್ತು. ಅದರೆ, ಕಳೆದ ಐದು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ. ಈನಡುವೆ, ಪರಿಶಿಷ್ಟ ಜಾತಿ ಮತ್ತು ವರ್ಗದವರ ಮಾಲಿಕತ್ವದ ಪತ್ರಿಕೆಗಳಿಗೆ ಜಾಹಿರಾತು ಹಣವನ್ನು ಎಸ್.ಸಿ.ಎಸ್.ಪಿ/ಟಿ.ಎಸ್.ಪಿಗೆ ಅನುದಾನದ ವ್ಯಾಪ್ತಿಗೆ ಒಳಪಡಿಸಿ ವಾರ್ತಾ ಇಲಾಖೆಯಿಂದ ಬೇರ್ಪಡಿಸಿ, ಈ ಸಮುದಾಯಗಳ ಪತ್ರಿಕೆಗಳನ್ನು ಮುಖ್ಯವಾಹಿನಿಯಿಂದ ದೂರವಿಡುವ ಷಡ್ಯಂತರ ನಡೆದಿದೆ ಎಂದು ದೂರಲಾಯಿತು.
The post ಕರ್ನಾಟಕ ಜಾಹೀರಾತು ನೀತಿ ಪುನರ್ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





