ಮೈಸೂರು,ಮಾರ್ಚ್,6,2026 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಇತಿಹಾಸದಲ್ಲಿ 17ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ ಅವರು ಮಂಡಿಸಿರುವ ರೂ.4,48,004 ಕೋಟಿ ಗಾತ್ರದ ಬಜೆಟ್ ಬಡಜನರ ಪರವಾಗಿ, ಅಭಿವೃದ್ಧಿಗೆ ಪೂರಕವಾಗಿ ಸರ್ವಜನಾಂಗದ ಹಿತ ಕಾಯುವ ಬಜೆಟ್ ಎಂದು ವಿಧಾನ ಪರಿಷತ್ ಸದಸ್ಯಕೆ.ಶಿವಕುಮಾರ್ ಪ್ರಶಂಸೆ ಮಾಡಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಶಿವಕುಮಾರ್, ತಾವು ಮಂಡಿಸಿದ ಎಲ್ಲಾ ಬಜೆಟ್ ನಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಜೆಟ್ ನಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನಾಡಿನ ಸಮಗ್ರ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ನಾನು ನಿವೇದನೆ ಮಾಡಿದ ಬಹತೇಕ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದ್ದ ಬೌದ್ಧ ಭಿಕ್ಕುಗಳ ಜೀವನ ನಿರ್ವಹಣೆಗೆ ಮಾಸಿಕ 6000 ರೂ. ಗೌರವಧನ ಹಾಗೂ ಬೌದ್ಧ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಬೌದ್ಧ ಧರ್ಮಕ್ಕೆ ಗೌರವ ಸಲ್ಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶವಾದ ಹನೂರು ತಾಲ್ಲೂಕು ಭಾಗದ ಜನರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಅನುದಾನ ಕೋರಲಾಗಿತ್ತು. ಅದರಂತೆ ಈ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ 490 ಕೋಟಿ ರೂ. ನೀರಾವರಿ ಯೋಜನೆಯನ್ನು ಈ ಬಜೆಟ್ನಲ್ಲಿ ಘೋಷಿಸಿದ್ದಾರೆ ಎಂದು ತಿಳಿಸಿದರು.
ದೇವದಾಸಿಯರ ಸ್ಥಿತಿಗತಿ ಹಾಗೂ ಅವರ ಮಕ್ಕಳ ಶೈಕ್ಷಣಿಕ ಬದುಕು ಅಧ್ಯಯನ ಸಮಿತಿ ರಚಿಸಲು ಕೋರಲಾಗಿತ್ತು. ಸಮಿತಿ ರಚನೆ ಸೇರಿದಂತೆ ದೇವದಾಸಿಯರ ಮಕ್ಕಳ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಲು ವಿದ್ಯಾರ್ಥಿವೇತನ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಮೈಸೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 200 ಹೆಚ್ಚುವರಿ ಹಾಸಿಗೆ ಸಾಮರ್ಥ್ಯದೊಂದಿಗೆ ಮೇಲ್ದರ್ಜೆಗೇರಿಸಲು 180 ಕೋಟಿ ರೂ. ಅನುದಾನವನ್ನು ಕಲ್ಪಿಸಿದ್ದಾರೆ. ಈ ಮೂಲಕ ಮಂಡ್ಯ, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಕೆ.ಶಿವಕುಮಾರ್ ನುಡಿದರು.
ಬೆಂಗಳೂರಿನ ಉತ್ತರ ಭಾಗದಲ್ಲಿ ಮತ್ತೊಂದು ಸುಸಜ್ಜಿತ ಜಯದೇವ ಹೃದ್ರೋಗ ಘಟಕವನ್ನು ಸ್ಥಾಪಿಸುವಂತೆ ಕೋರಲಾಗಿತ್ತು. ಅದರಂತೆ ಬೆಂಗಳೂರಿನ ಗೋವಿಂದರಾಜನಗರದ ಬಿಬಿಎಂಪಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ15 ಕೋಟಿ ರೂ ಅನುದಾನ ನೀಡಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಘೋಷಿಸಲಾಗಿದೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಜನರಿಗೆ ತುರ್ತು ಚಿಕಿತ್ಸೆ ಸುಲಭವಾಗಿ ಮತ್ತು ಸಕಾಲಕ್ಕೆ ಲಭ್ಯವಾಗಲಿದೆ.
ಕನ್ನಡ ಸಿನಿಮಾ ರಂಗದಲ್ಲಿ “ಚಿತ್ರಬ್ರಹ್ಮ” ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮಸ್ಥಳವನ್ನು ಸಂರಕ್ಷಿಸಿ, ಸಮಗ್ರ ಅಭಿವೃದ್ಧಿಯೊಂದಿಗೆ ಸಾಂಸ್ಕೃತಿಕ ಪ್ರವಾಸಿ ತಾಣವನ್ನಾಗಿ ರೂಪಿಸಲು ನಿಯಮ-330 ನೋಟಿಸ್ ನೀಡಿದ್ದೆ. ಅದರಂತೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ”ಕಣಗಾಲ್” ಗ್ರಾಮದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ದೌರ್ಜನ್ಯ ತಡೆಗೆ ʻರೋಹಿತ್ ವೇಮುಲ ಕಾಯ್ದೆʼಯಿಂದ ವಿದ್ಯಾಸಂಸ್ಥೆಗಳಲ್ಲಿ ತಳಸಮುದಾಯದ ವಿದ್ಯಾರ್ಥಿಗಳ ಮೇಲೆ ನಡೆಸುವ ಶೋಷಣೆ ತಪ್ಪಲಿದೆ. ಹಾಗೂ ಕಾಲೇಜು ವಿದ್ಯಾರ್ಥಿಗಳ ಚುನಾವಣೆಯಿಂದ ಯುವ ಸಮೂಹದಲ್ಲಿ ಸಂಘಟನಾತ್ಮಕ ಹೋರಾಟ ಮತ್ತು ನಾಯಕತ್ವ ಗುಣವನ್ನು ಬೆಳೆಯಲಿದೆ ಎಂದಿದ್ದಾರೆ.
ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಹೆಚ್ಚುವರಿಯಾಗಿ 300 ಹೊಸ ‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧಾರ ಹಾಗೂ ಸಿರಿಧಾನ್ಯ ಬೆಳೆಗಾರರಿಗೆ ಸಮುದಾಯ ಆಧಾರಿತ ಸಂಸ್ಕರಣಾ ಘಟಕಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ವಿಶೇಷ ಪ್ರೋತ್ಸಾಹ ರೈತರಿಗೆ ಅನುಕೂಲವಾಗಿದೆ.
ಎಸ್ ಸಿಎಸ್ ಪಿ ಮತ್ತು ಟಿಎಸ್ ಪಿ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡ ಸಮುದಾಯದ ಅಭಿವೃದ್ಧಿಗಾಗಿ 44,632 ಕೋಟಿ ರೂ. ಅನುದಾನ ಹಂಚಿಕೆ ಹಾಗೂ ಆಯ್ದ 2,000 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳನ್ನು ‘ಪ್ರಗತಿ ಕಾಲೋನಿ’ಗಳಾಗಿ ಅಭಿವೃದ್ಧಿಪಡಿಸಲು ತಲಾ 1 ಕೋಟಿಯಂತೆ ಒಟ್ಟು 2000 ಕೋಟಿ ರೂ. ಅನುದಾನ ಘೋಷಿಸಿರುವುದು ಶೋಷಿತರ ಪರವಾದ ಸರ್ಕಾರ ಎಂಬುದಕ್ಕೆ ಸಾಕ್ಷಿಯಾಗಿದೆ. ಬೆಳಗಾವಿ, ಮೈಸೂರು ಮತ್ತು ಕಲಬುರಗಿ ಸೇರಿದಂತೆ ಆಯ್ದ ನಗರಗಳಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಉದ್ಯೋಗಸ್ಥ ಮಹಿಳೆಯರಿಗಾಗಿ ಹೊಸ ಹಾಸ್ಟೆಲ್ ನಿರ್ಮಾಣಕ್ಕೆ ನೀಡಿರುವ ಅನುಮೋದನೆಯು ಪರಿಶಿಷ್ಟರ ಏಳಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕೃತಕ ಬುದ್ದಿಮತ್ತೆ (AI) ಮತ್ತು ರೊಬೊಟಿಕ್ಸ್ ಹಾಗೂ AI ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಯು ತಂತ್ರಜ್ಞಾನ ಅಳವಡಿಕೆಗೆ ಸಹಕಾರಿಯಾಗಲಿದೆ. ಮಾಹಿತಿ ತಂತ್ರಜ್ಞಾನಕ್ಕೆ ಪೂರಕ ವಾತಾವರಣದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 56,432 ಹುದ್ದೆಗಳನ್ನು ಭರ್ತಿ ಮಾಡಲು ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿರುವುದು ನಿರೋದ್ಯೋಗಿ ಯುವಸಮೂಹಕ್ಕೆ ಆಶಾದಾಯಕವಾಗಿದೆ. ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ಮೈಸೂರು ಭಾಗ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಅನಾವರಣ ಮಾಡಿದ್ದಾರೆ ಎಂದು ಕೆ.ಶಿವಕುಮಾರ್ ಬಣ್ಣಿಸಿದರು.
Key words: Balanced, Budget, MLC, K. Shivakumar
The post ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಸಮತೋಲಿತ ಬಜೆಟ್: MLC ಕೆ.ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





