ಬೆಂಗಳೂರು,ಫೆಬ್ರವರಿ,20,2026 (www.justkannada.in): ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು, ಚಪ್ಪಲಿ ತೂರಾಟದ ಪುಂಡಾಟಿಕೆ ನಡೆದಿರುವುದು ಅತ್ಯಂತ ಖಂಡನೀಯ ಹಾಗೂ ಹೇಯ ಕೃತ್ಯ. ಈ ಓಲೈಕೆ ದುರಾಡಳಿತದ, ತುಘಲಕ್ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಶಾಂತಿ ಕದಡುವ ಕಿಡಿಗೇಡಿಗಳಿಗೆ ರಾಜಾಶ್ರಯ ಸಿಕ್ಕಿದೆ. ಪೊಲೀಸರ ಉಪಸ್ಥಿತಿಯಲ್ಲಿಯೇ ಕಲ್ಲು ತೂರಾಟ ನಡೆದರೆ, ಇನ್ನು ರಾಜ್ಯದಲ್ಲಿ ಜನಸಾಮಾನ್ಯರಿಗೆ ಸುರಕ್ಷತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಹಿಂದೂಗಳ ಹಬ್ಬ ಮತ್ತು ಮೆರವಣಿಗೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ನಿರಂತರ ದಾಳಿಗಳು ವ್ಯವಸ್ಥಿತ ಪಿತೂರಿಯಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ತಮ್ಮ ಪರ ನಿಲ್ಲಲಿದೆ ಎನ್ನುವ ಧೈರ್ಯವಿಲ್ಲದೆ ಇಂತಹ ಪುಂಡಾಟಿಕೆ ನಡೆಯುವುದು ಸಾಧ್ಯವಿಲ್ಲ. ಈಗಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತನ್ನ ಓಲೈಕೆ ರಾಜಕೀಯವನ್ನು ಬಿಟ್ಟು, ರಾಷ್ಟ್ರದ ಅಸ್ಮಿತೆಯಾಗಿರುವ ಶಿವಾಜಿ ಮಹಾರಾಜರ ಗೌರವಕ್ಕೆ ಧಕ್ಕೆ ತಂದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಮುಖ್ಯಮಂತ್ರಿಗಳೇ, ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಮ್ಮ ಆರಾಧ್ಯ ಪುರುಷರ, ನಾಡಿನ ಅಸ್ಮಿತೆಯ ವಿಷಯದಲ್ಲಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ! ಎಂದು ಬಿವೈ ವಿಜಯೇಂದ್ರ ಎಚ್ಚರಿಸಿದ್ದಾರೆ.
Key words: Stone pelting, despite police, safety, common people, BY Vijayendra
The post ಪೊಲೀಸರಿದ್ದರೂ ಕಲ್ಲು ತೂರಾಟ: ಜನಸಾಮಾನ್ಯರಿಗೆ ಸುರಕ್ಷತೆ ಎಲ್ಲಿದೆ?- ಬಿವೈ ವಿಜಯೇಂದ್ರ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





