ಮೈಸೂರು ಅಕ್ಟೋಬರ್, 11,2025 (www.justkannada.in): ಯಾವುದೇ ವಿಷಯದಲ್ಲಿ ಪರಿಣಿತ ಹೊಂದಿದವರಿಗೆ ವಿದೇಶದಲ್ಲಿ ವಿಪುಲ ಅವಕಾಶ ಲಭ್ಯ ಇವೆ ಎಂದು ದುಬೈನ ಖಾಸಗಿ ಕಾನೂನು ಸಲಹೆಗಾರ್ತಿ ಗೀತಾಲಕ್ಷ್ಮೀ ರಾಮಚಂದ್ರನ್ ಅಭಿಮತ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಭಾಷೆ ಬಳಕೆ ಹಾಗೂ ಸಮಕಾಲೀನ ಸಮಾಜದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯ ಒಳಿತು ಕೆಡುಕು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೀತಾಲಕ್ಷ್ಮೀ ರಾಮಚಂದ್ರನ್ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಹೆಣ್ಣುಮಕ್ಕಳಿಗೆ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವಕಾಶಗಳ ಮಹಾಪೂರವೇ ಇದೆ. ಆದರೆ ಅದಕ್ಕೆ ಅಗತ್ಯವಾದ ಪರಿಣಿತಿ ಅಗತ್ಯವಿದೆ. ಇದ್ದವರಿಗೆ ಅವಕಾಶ ಸಿಗಲಿದೆ. ಹಾಗಾಗಿ ಆ ಪರಿಣಿತಿ ಪಡೆದುಕೊಳ್ಳಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಸಂಸ್ಥೆಗಳಿಗಿಂತ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವಕಾಶ ಹೆಚ್ಚಾಗಿವೆ. ಅದರಲ್ಲೂ ಕಾನೂನು ವಿಭಾಗದಲ್ಲಿ ಹೇರಳವಾಗಿವೆ. ಆದರಿಂದ ಕಾನೂನು ಅಧ್ಯಯನ ಮಾಡುವ ಮೂಲಕ ಅದರ ಅರಿವು ಪಡೆದುಕೊಳ್ಳಿ ಎಂದ ಅವರು, ಮಹಿಳೆಯರಿಗೆ ಕಾನೂನು ಅರಿವು ವೈಯಕ್ತಿಕ ಮತ್ತು ಸಾಮುದಾಯಿಕವಾಗಿ ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬದಲಾದ ಕಾಲಮಾನಕ್ಕೆ ತಕ್ಕಂತೆ ಅಂತರ್ಜಾಲ ತಾಣಗಳು ಕುರಿತು ಕಾನೂನು, ಕ್ಲೌಡ್ ಕಾನೂನು, ಡಾಟಾ ಸಂರಕ್ಷಣೆ ಕಾನೂನು ಮತ್ತು ಕೃತಕ ಬುದ್ಧಿಮತ್ತೆ ಕಾನೂನು ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದ ಅವರು, ಇದನ್ನು ಮಾತೃಭಾಷೆ ಜತೆಗೆ ಇತರೆ ಅಂದರೆ ಇಂಗ್ಲಿಷ್ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಜ್ಞಾನ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಜತೆ ಜತೆಗೆ ಭಾಷೆ ಬದಲಾಗುತ್ತದೆ. ಅಲ್ಲದೇ ಅವುಗಳ ಜತೆಗೆ ತೊಂದರೆಗಳು ಕೂಡ ಅಧಿಕ. ಹಾಗಾಗಿ, ತಂತ್ರಜ್ಞಾನ ಬಳಸಿ ಉನ್ನತೀಕರಿಸಿಕೊಳ್ಳುವ ಜತೆಗೆ ಅಪಾಯದ ಬಗ್ಗೆ ಅರಿತು ಎಚ್ಚರಿಕೆಯಿಂದ ಇರಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು ಮಾತನಾಡಿ, ದುರ್ದಿನಗಳು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿರುವ ಇಂದು ಹೆಣ್ಣುಮಕ್ಕಳು ಕಾನೂನು ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಸಮಾಜವನ್ನು ಎದುರಿಸುವುದು ಕಷ್ಟ ಆಗಲಿದೆ ಎಂದು ಎಚ್ಚರಿಸಿದರು.
ವಿಭಾಗದ ಪ್ರಾಧ್ಯಾಪಕ ಡಾ.ಪರಶಿವಮೂರ್ತಿ ಎಚ್.ಎಸ್ ಅವರನ್ನು ಸನ್ಮಾನಿಸಲಾಯಿತು. ಸಹಪ್ರಾಧ್ಯಾಪಕಿ ಡಾ.ಶೋಭಲತ ಎನ್ ಸ್ವಾಗತಿಸಿದರೆ, ಅಧ್ಯಾಪಕ ರಂಗನಾಥ ಎಚ್.ಎಸ್. ವಂದಿಸಿದರು. ಅಧ್ಯಾಪಕ ದಿನೇಶ್ ಎಚ್.ಆರ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗೋವಿಂದರಾಜು ನಿರೂಪಿಸಿದರು. ಡಾ. ಆನಂದ್ ಎಚ್. ಸಿ, ಅಧ್ಯಾಪಕರು, ಅಧ್ಯಾಪಕೇತರರು, ಬಿಸಿಎ ಮತ್ತು ಬಿಎಸ್ಸಿ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Key words: Mysore, Maharani college, Geethalakshmi Ramachandran
The post ವಿಷಯ ಪರಿಣಿತರಿಗೆ ವಿದೇಶದಲ್ಲಿ ವಿಪುಲ ಅವಕಾಶ -ಗೀತಾಲಕ್ಷ್ಮೀ ರಾಮಚಂದ್ರನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





