ಮೈಸೂರು,ಸೆಪ್ಟಂಬರ್,20,2025 (www.justkannada.in): ದಸರಾ ಉದ್ಘಾಟಕರ ವಿವಾದ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಚಿವ ಹೆಚ್.ಸಿ ಮಹದೇವಪ್ಪ, ಸಂವಿಧಾನ ಪೀಠಿಕೆ ಟೌನ್ ಹಾಲ್ ಮುಂದೆ ಹಾಕಿದ್ದೇವೆ. ಭಾರತದಲ್ಲಿ 130 ಕೋಟಿ ಜನ ಇದ್ದಾರೆ. ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದ್ದೇವೆ. ಇದರ ಉದ್ದೇಶ ಬಹುತ್ವ ಕಾಪಾಡುವುದು. ಗೊಂದಲಕ್ಕೆ ಅನುಮಾನಕ್ಕೆ ಅಪಮಾನಕ್ಕೆ ದ್ವೇಷಕ್ಕೆ ಅವಕಾಶ ಇಲ್ಲ ಅಂತ ಸಂವಿಧಾನ ಹೇಳಿದೆ. ಇದನ್ನೇ ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧಿಗಳಿಗೆ ಸಂವಿಧಾನ ಬೀಗ ಹಾಕಿದೆ. ವಿರೋಧಿಗಳಿಗೆ ಇನ್ಮುಂದೆ ಬುದ್ಧಿ ಬರಬೇಕು. ಅತ್ಯಂತ ಪ್ರೀತಿಯಿಂದ ಎಲ್ಲರೂ ದಸರಾ ಆಚರಣೆ ಮಾಡಬೇಕು. ಎಲ್ಲರೂ ಭಾಗಿಯಾಗಿ ಅಂತ ನಾನು ಆಹ್ವಾನ ಕೊಡುತ್ತೇವೆ ಎಂದರು.
ರಾಜ್ಯದಲ್ಲಿ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್ ಸಿ ಮಹದೇವಪ್ಪ, ಸ್ವಾತಂತ್ರ್ಯಕ್ಕಿಂತ ಮುಂಚೆಯ ವರ್ಣಾಶ್ರಮ ಮಾಡುತ್ತಿದ್ದಾರೆ. ಬಿಜೆಪಿಗೆ ಇದರಲ್ಲಿ ನಂಬಿಕೆ ಇದೆ. ನಾವು ಜಾತಿಗಣತಿ ಮಾಡುತ್ತಿರುವುದು ಪ್ರತಿಪ್ರಜೆಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಬದುಕು ಹೇಗಿದೆ ಅಂತ ತಿಳಿದುಕೊಳ್ಳೋದಕ್ಕೆ. ಇದರಲ್ಲಿ ಬಿಜೆಪಿ ವಿರೋಧ ಮಾಡೋದಕ್ಕೆ ಏನಿದೆ ಎಂದು ಪ್ರಶ್ನಿಸಿದರು.
ಇರುವ ಜಾತಿಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ನಾವು ಯಾವ ಜಾತಿಯನ್ನು ಹುಟ್ಟು ಹಾಕುತ್ತಿಲ್ಲ. ಹಿಂದೂಗಳನ್ನು ಯಾರು ಟಾರ್ಗೆಟ್ ಮಾಡ್ತಿಲ್ಲ. ಇದು ಬಿಜೆಪಿ ಹೇಳುವ ಅಪ್ಪಟ ಸುಳ್ಳು. ಹಿಂದೂ ಧರ್ಮ ಒಡೆಯುವ ಪ್ರಮೇಯ ನಮಗೆ ಇಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಹಾಗಾದರೆ ಹಿಂದೂ ಧರ್ಮದಲ್ಲಿ ಏನಿದೆ?. ಬಲವಂತವಾಗಿ ಮತಾಂತರ ತಪ್ಪು. ಅದು ಅವರ ಹಕ್ಕು . ಸಚಿವ ಸಂಪುಟದಲ್ಲಿ ಯಾವ ಒಡಕು ಇರಲಿಲ್ಲ. ಒಮ್ಮತದ ತೀರ್ಮಾನದ ಮೇಲೆ ನೂತನ ಸಮೀಕ್ಷೆ ಮಾಡುತ್ತಿದ್ದೇವೆ. ಲಿಂಗಾಯತ ಒಕ್ಕಲಿಗ ಸಮುದಾಯದ ಅವರವರ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ ಎಂದರು.
ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್ ಸಿ ಮಹದೇವಪ್ಪ, ಇರೋದು ಒಂದೇ ಸಿಎಂ ಕುರ್ಚಿ . ಅದರಲ್ಲಿ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ. 2028ರ ತನಕ ಅವರೇ ಕುಳಿತಿರುತ್ತಾರೆ. ಕಾರ್ಯಕರ್ತರು ಆಸೆ ಇದೇ ಕೂಗುತ್ತಾರೆ ಎಂದು ಹೇಳುವ ಮೂಲಕ 5 ವರ್ಷ ಸಿದ್ದರಾಮಯ್ಯ ಸಿಎಂ ಎಂದು ಪರೋಕ್ಷವಾಗಿ ಹೇಳಿದರು.
Key words: Dasara inauguration, Constitution, opponents, Minister, HC Mahadevappa
The post ದಸರಾ ಉದ್ಘಾಟಕರ ವಿವಾದ: ವಿರೋಧಿಗಳ ಬಾಯಿಗೆ ಸಂವಿಧಾನ ಬೀಗ ಹಾಕಿದೆ-ಸಚಿವ ಹೆಚ್.ಸಿ ಮಹದೇವಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





