ಬೆಂಗಳೂರು, ಮೇ, 7,2026 (www.justkannada.in): ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲ್ಲ ಎನ್ನುವ ಮೂಲಕ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಅವರಿಗೆ ಸಮಸ್ಯೆ ಇದ್ದರೆ ಕೋರ್ಟ್ ಮೊರೆ ಹೋಗಬೇಕೇ ಹೊರತು ಕೊಲೆ ಮಾಡಿಸಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ತಮ್ಮನ್ನು ವಜಾ ಮಾಡಿ ಕಳುಹಿಸಲಿ, ಅದರಿಂದ ಹೊಸ ನಾಟಕ ನಡೆಯಲಿ ಎಂದೇ ಅವರು ಬಯಸುತ್ತಿದ್ದಾರೆ. ಅವರಿಗೆ ಕಾನೂನು, ಸಂವಿಧಾನ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿ ಕುರ್ಚಿಗೆ ಅವರು ಫೆವಿಕಾಲ್ ಹಾಕಿಕೊಂಡು ಕೂತಿದ್ದಾರೆ.. ಸಿಎಂ ಸ್ಥಾನಕ್ಕೆ ಗೌರವದಿಂದ ನಡೆದುಕೊಳ್ಳಬೇಕು. ಅವರಿಗೆ ಗಲಭೆ ನಡೆಯಬೇಕೆಂಬ ಉದ್ದೇಶವಿದೆ. ಅದಕ್ಕಾಗಿ ಚಂದ್ರನಾಥ ರಥ್ ಅವರನ್ನು ಟಿಎಂಸಿ ಮುಖಂಡರು ಕೊಲೆ ಮಾಡಿದ್ದಾರೆ. ತಾವೊಬ್ಬರೇ ರಾಜ್ಯವನ್ನು ನಿಯಂತ್ರಿಸಬೇಕೆಂಬ ಮನಸ್ಥಿತಿ ಅವರಲ್ಲಿದೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ, ಕಾರ್ಯಕ್ರಮಕ್ಕೆ ಸಿದ್ಧತೆ
ಪಂಚರಾಜ್ಯಗಳ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಬಿಜೆಪಿಯ ಸಾಧನೆ ಇಡೀ ಜಗತ್ತಿಗೆ ಗೊತ್ತಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸುತ್ತಿರುವುದು ಪಕ್ಷಕ್ಕೆ ಕೀರ್ತಿ ತರುವ ಸಂಗತಿ. ಬೆಂಗಳೂರಿಗೆ ಬರಲಿರುವ ಪ್ರಧಾನಿಗೆ ಗೌರವ ಸಲ್ಲಿಸಲಿದ್ದು, ಬೆಂಗಳೂರಿನ ಜನರನ್ನುದ್ದೇಶಿಸಿ ಪ್ರಧಾನಿ ಮಾತಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಕ್ತ ಆಹ್ವಾನವಿದ್ದು, ಎಲ್ಲರೂ ಬರಬಹುದು. ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಬರಬೇಕು. ಇದಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
Key words: Mamata Banerjee, disrespect, Constitution, R. Ashok
The post ಮಮತಾ ಬ್ಯಾನರ್ಜಿಯಿಂದ ಸಂವಿಧಾನಕ್ಕೆ ಅಗೌರವ: ಸಮಸ್ಯೆ ಇದ್ದರೆ ಕೋರ್ಟ್ ಮೊರೆ ಹೋಗಲಿ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





