ಮೈಸೂರು, ನವೆಂಬರ್,1, 2025 (www.justkannada.in): ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರಗಳ ಪ್ರಯತ್ನದ ಜತೆಗೆ ನಾವೆಲ್ಲರೂ ಕೈಜೋಡಿಸಬೇಕೆಂದು ಶಾಸಕರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧ್ಯಕ್ಷರೂ ಆಗಿರುವ ರಮೇಶ್ ಬಂಡಿಸಿದ್ದೇಗೌಡ ಕರೆ ನೀಡಿದರು.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿದರು.
“ಕನ್ನಡ ನಾಡು ತಪೋಭೂಮಿ ಆಗಿದ್ದು, ಇಲ್ಲಿ ಜನಿಸಿರುವುದು ಎಲ್ಲರ ಪುಣ್ಯ. ಕನ್ನಡ ನಮ್ಮ ಮಾತೃ ಭಾಷೆಯಾದರೂ, ಮನೆಗಳಲ್ಲಿ ಬಿಟ್ಟರೆ ಸರ್ಕಾರದ ಹಂತದಲ್ಲಿ ಬಳಕೆ ಮಾಡದಿದ್ದರೆ ಕನ್ನಡವನ್ನು ಮರೆತು ಆಂಗ್ಲ ಭಾಷೆಯ ಬಳಕೆಗೆ ನಾವು ಮುಂದಾಗುತ್ತಿದ್ದೆವು. ಕನ್ನಡ ಭಾಷೆಯ ಮೇಲೆ ಅಭಿಮಾನ ಇದ್ದರೂ, ಕನ್ನಡವನ್ನು ಮರೆಯುತ್ತಿದ್ದೇವೆ. ದಿನನಿತ್ಯದ ಕೆಲಸಗಳಲ್ಲಿ ಕನ್ನಡ ಬಳಕೆಗೆ ಹಿಂದೇಟು ಹಾಕುತ್ತಿದ್ದೇವೆ. ಹೊರಗಿನ ಪ್ರಪಂಚದ ಜ್ಞಾನವನ್ನು ಬೆಳೆಸಿಕೊಳ್ಳಲು ನಾವು ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ ನಮ್ಮ ಮಾತೃ ಭಾಷೆ ಮರೆಯಬಾರದು, ಮಾತ್ರಭಾಷೆ ಮರೆತರೆ ನಮಗೆ ಜನ್ಮನೀಡಿದ ತಾಯಿಯನ್ನು ಮರೆತಂತೆ” ಎಂದು ಅಭಿಪ್ರಾಯಪಟ್ಟರು.
ಉತ್ತಮ ಕೆಲಸ ಮಾಡೋಣ – ಕೆ.ಎಂ. ಮುನಿಗೋಪಾಲ್ ರಾಜು
ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಅವರು ಮಾತನಾಡಿ, “ನಿತ್ಯದ ಕಚೇರಿಗಳಲ್ಲಿ ನಮಗೆ ತೊಂದರೆಗಳ ಜತೆಗೆ ಅನುಕೂಲಗಳು ಇದೆ. ಆದರೆ ನಾವೆಲ್ಲವೂ ತಂಡವಾಗಿ ಕೆಲಸ ಮಾಡಿದರೆ ಪರಿಣಾಮಕಾರಿಯಾಗಲಿದೆ. ಇದರಿಂದ ನಿಗಮಕ್ಕೆ ಹಾಗೂ ನಿಮಗೂ ಭದ್ರತೆ ದೊರೆಯಲಿದೆ. ದೈನಂದಿನ ಕೆಲಸಗಳನ್ನು ಸ್ವಇಚ್ಛೆಯಿಂದ ಉತ್ತಮವಾಗಿ ಮಾಡಿದರೆ ನಮ್ಮ ಸಂಸ್ಥೆ ಆರ್ಥಿಕವಾಗಿಯೂ ಸದೃಢವಾಗಲಿದೆ. ಹೀಗಾಗಿ ಸಮಯ ಪಾಲನೆಯೊಂದಿಗೆ ಹೊಸತನವನ್ನು ಅಳವಡಿಸಿಕೊಂಡು ಕೆಲಸ ಮಾಡುವಲ್ಲಿ ಚಿಂತನೆ ನಡೆಸಬೇಕಿದೆ” ಎಂದರು.
ಮಾದರಿ ಸಂಸ್ಥೆಯಾಗಿದೆ :
“ಉಳಿದ ಸಂಸ್ಥೆಗಳಿಗಿಂತಲೂ ನಮ್ಮ ನಿಗಮದ ಕೆಲಸ, ಯೋಜನೆಗಳು ಮಾದರಿ ಆಗಿದೆ. ಸಾಕಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, 32 ಸಿಎ ನಿವೇಶನಗಳನ್ನು ಪಡೆಯಲಾಗಿದ್ದು, ಸ್ವಂತ ಕಟ್ಟಡ ಕಟ್ಟುವ ಕೆಲಸಗಳು ನಡೆಯುತ್ತಿದೆ. ನಮ್ಮ ಕೆಲಸಗಳಿಗೆ ನಿಗಮದ ಅಧ್ಯಕ್ಷರು ನಮಗೆ ಒತ್ತಾಸೆಯಾಗಿ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ನಾವೆಲ್ಲರೂ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಂಸ್ಥೆಯ ಪ್ರಗತಿಗೆ ಶ್ರಮಿಸೋಣ” ಎಂದು ಹೇಳಿದರು.
ಇದಕ್ಕೂ ಮುನ್ನ ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಸಮಾರಂಭದಲ್ಲಿ ಚಾವಿಸನಿನಿ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ(ತಾಂತ್ರಿಕ) ಶರಣಮ್ಮ ಎಸ್. ಜಂಗಿನ್, ಮುಖ್ಯ ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕ ಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕಿ(ಆ ಮತ್ತು ಮಾ.ಸಂ) ಡಾ. ಬಿ.ಆರ್. ರೂಪ, ಜಾಗೃತ ದಳದ ಪೊಲೀಸ್ ಅಧೀಕ್ಷಕಿ ಸವಿತಾ ಹೂಗಾರ್, ಪ್ರಧಾನ ವ್ಯವಸ್ಥಾಪಕ (ಖರೀದಿ) ಎಲ್. ಲೋಕೇಶ್, ಪ್ರಧಾನ ವ್ಯವಸ್ಥಾಪಕ(ಐಟಿ ಮತ್ತು ಎಂಐಎಸ್) ರಾಮಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
Key words: Kannada language, MLA, CESC, President, Ramesh Bandisidde Gowda
The post ಕನ್ನಡ ಭಾಷೆ ಉಳಿಸಲು ಎಲ್ಲರೂ ಕೈಜೋಡಿಸೋಣ- ಶಾಸಕ, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





